Monday, November 30, 2009

SAP ಲ್ಯಾಬ್ಸ್ ಅಲ್ಲಿ ನಡೆದ ಕನ್ನಡ ನಾಡ ಹಬ್ಬ 2009


೬-೧೧-೨೦೦೯ ಶುಕ್ರವಾರದಂದು ಎಸ್ ಏ ಪಿ ಲಾಬ್ಸ್ ಅಂಗಳದಲ್ಲೆಲ್ಲ ಹಬ್ಬದ ವಾತಾವರಣ. ಬೆಳ್ಳಂ-ಬೆಳಿಗ್ಗೆ ೭.೫೦ ರಿಂದಲೇ ಜನರ ಸಡಗರ ಶುರುವಾಗಿತ್ತು. ಚಮಕ್-ಧಮಕ್ ಆಗಿ ತಯಾರಾಗಿ ಬಂದ ಆಸಕ್ತರೆಲ್ಲರೂ ಧ್ವಜಾರೋಹಣ ಕಾರ್ಯಕ್ರಮಕ್ಕೆ ಸಜ್ಜಾಗಿದ್ದರು. ಅಜಯ್ ರಾವ್, ಅರುಣ್ ಆರ್, ಚಂದನ್, ಅನುಪಮ ಅವರುಗಳಿಂದ ರಿಸೆಪ್ಶನ್ ಬ್ಲಾಕ್ ಪಕ್ಕದಲ್ಲಿ ನಾಡ ಗೀತೆಯೊಂದಿಗೆ ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು. ನೆರೆದವರಿಗೆಲ್ಲರಿಗೂ ಮೈಸೂರ್-ಪಾಕ್ ಹಂಚಲಾಯಿತು.




ಮಧ್ಯಾಹ್ನ ಸುಮಾರು ೩.೧೫ ಘಂಟೆಗೆ ಊಟದ ನಂತರದ ಅರೆ ನಿದ್ದೆಯಲ್ಲಿದ್ದವರನ್ನೆಲ್ಲ ಎಚ್ಚರ ಗೊಳಿಸುವಂತೆ "ಜಾನಪದ ಲೋಕ(ರಾಮ ನಗರ) ದಿಂದ ಬಂದಿದ್ದ ಡೊಳ್ಳು-ಕುಣಿತ ಹಾಗು ಕಂಸಾಳೆ ತಂಡದವರ ಕಾಂಪಸ್-ಪ್ರದಕ್ಷಿಣೆ ಆರಂಭಗೊಳ್ಳುವಂತೆಯೇ ಅನೇಕರು ಅವರ ಜೊತೆ-ಜೊತೆಯಲ್ಲಿಯೇ ಹೆಜ್ಜೆ ಹಾಕುತ್ತಾ ಕುಣಿದು-ಕುಪ್ಪಳಿಸಿದರು. 


೩.೩೦ ರ ಹೊತ್ತಿಗೆ ಸಭಾಂಗಣದಲ್ಲಿ ತುಂಬು ಪ್ರೇಕ್ಷಕರು ಕಾರ್ಯಕ್ರಮದ ಆರಂಭಕ್ಕೆ ಕುತೂಹಲದಿಂದ ಕಾದಿದ್ದರು. ಊರ ಜಾತ್ರೆಯನ್ನು ನೆನಪು ಮಾಡುವಂತೆ ತಾಯಿ ಭುವನೇಶ್ವರಿಯ ಪಲ್ಲಕ್ಕಿ ವೇದ-ಘೋಷ, ಕೋಲಾಟ ಇತ್ಯಾದಿಗಳೊಂದಿಗೆ ಮೆರವಣಿಗೆಯಾಯಿತು. ಕಾರ್ಯಕ್ರಮದ ಸೂತ್ರಧಾರಿಗಳೂ ನಿರೂಪಕರಾದ ಗೋವಿಂದ್ ದಾಮೋದರ್ ಹಾಗೂ ಶರ್ಮಿಳಾ.ಎಸ್ ಹಾಗೂ ಸುಮೀತ್ ಮೂವರೂ ಜನರನ್ನು ಸ್ವಾಗತಿಸಿದರು. ಮುಖ್ಯ ಅತಿಥಿಗಳಾದ ಅರುಣ್ ಶಂಕರ್, ಅಜಯ ರಾವ್, ವಸುಧೇಂದ್ರ ರಾವ್ ಅವರುಗಳು ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಆರಂಭಿಸಿದರು. ನಂತರ "ಗೆಳೆಯರ ಬಳಗದ" ಕಿರು ಪರಿಚಯವನ್ನು ಅರುಣ್ ಆರ್ ನೀಡಿದರು.


ಜೆನಿಸಿಸ್ ಕಂಪನಿಯ ಉದ್ಯೋಗಿ ಹಾಗು ಪ್ರಖ್ಯಾತ ಕನ್ನಡ ಬರಹಗಾರರಾದ ವಸುಧೇಂದ್ರ ಅವರು "ಭಾಷೆ-ತಾಯ್ನಾಡಿನ" ಮೋಹ ಹಾಗೂ ಅಭಿಮಾನಗಳ ಕುರಿತು ಪುರಾಣ-ಪುಣ್ಯಕಥೆಗಳ ಹೋಲಿಕೆಗಳೊಂದಿಗೆ ಅದ್ಭುತವಾದ ವಿವರಣೆಯನ್ನು ಸಭೆಗೆ ನೀಡಿದರು. ಶಿಲ್ಪ ಕೆ ಅವರು ತಮ್ಮ  ಭೀಮನನ್ನು ಕುರಿತು ಅಪರೂಪದ ದೇವರನಾಮದೊಂದಿಗೆ ಜನರ ಕಿವಿಗಳನ್ನು ಇಂಪುಗೊಳಿಸಿದರು. ಜಾನಪದ ನ್ರುತ್ಯಗಳಲ್ಲಿ ಬಹಳ ಖ್ಯಾತಿಯನ್ನು ಹೊಂದಿದ ಕಂಸಾಳೆ ನೃತ್ಯ ಶುರುವಾಗುತ್ತಲೇ ಜನರು ಕೂತು ಕೂತಲ್ಲಿಯೇ ಕಾಲು ಕುಣಿಸಿದ್ದರು. ಹಳೆ ನೆನಪುಗಳನ್ನು ತಾಜಾ ಗೊಳಿಸಲು ಸೌಮ್ಯಶ್ರೀ ತಂಡದವರು ಆಯ್ದ ೩ ಹಳೇ ಕನ್ನಡ ಚಿತ್ರ ಗೀತೆಗಳನ್ನು ಕೂಡಿಸಿ ಗಿಲಿ ಗಿಲಿ ಗಿಲಕ್ಕು ಹಾಡಿನೊಂದಿಗೆ ತಮ್ಮ ನೃತ್ಯವನ್ನು ಅಂತ್ಯಗೊಳಿಸಿದರು. 


ವೃಂದ-ಗಾನ ತಂಡದವರು  ಕನ್ನಡದ ಕವಿಗಳಿಗೆ ಗೌರವ ಸೂಚಿತವಾಗಿ ೭ ಖ್ಯಾತ ಭಾವಗೀತೆಗಳನ್ನು ಒಗ್ಗೂಡಿಸಿ ಮೆಡ್ಲಿ ರೂಪದಲ್ಲಿ ಪ್ರಸ್ತುತಗೊಳಿಸಿದರು. ವೇದಿಕೆಯ ಹಿಮ್ಮೇಳದಲ್ಲಿ ಆಯಾ ಕವಿಗಳನ್ನು ಕುರಿತು ಸಣ್ಣ ಮಾಹಿತಿಗಳನ್ನೂ ಪ್ರೊಜೆಕ್ಟರ್ ಮೂಲಕ ಪ್ರದರ್ಶಿಸಲಾಗಿತ್ತು. ನಾವಿದ್ದ ಸ್ಥಳದ ಭಾಷೆ ಬಾರದಿದ್ದಾಗ ಆಗುವ ಅನರ್ಥಗಳು ಹಾಗು ಅನಾನುಕೂಲಗಳನ್ನು ಕುರಿತು ಹರ್ಷ ಹಾಗು ತಂಡದವರಿಂದ ಸಣ್ಣ ನಾಟಕ ಪ್ರದರ್ಶನವಾಯಿತು. ಜನರನ್ನು ಜಾಗರೂಕವಾಗಿ ರಂಜಿಸುವಲ್ಲಿ ಈ ತಂಡ ಗೆದ್ದಿತ್ತು. ಕಾರ್ಯಕ್ರಮದ ಮುನ್ನ ಏರ್ಪಡಿಸಲಾಗಿದ್ದ ೪ ಸ್ಪರ್ಧೆಗಳ ಬಹುಮಾನ ವಿತರಣೆಯನ್ನು ಲೋಪಮುದ್ರ ಅವರು ನೆರ‍ವೇರಿಸಿಕೊಟ್ಟರು. ವಿಜೇತರಿಗೆಲ್ಲ ಶುಭ ಕೋರುತ್ತ ಜಾತ್ರೆ-ಕಾರ್ಯಕ್ರಮ ಮುಂದುವರೆಯಿತು.


ನಗಿಸಿತ್ತಲೇ ಜನರನ್ನು ಜಾಗ್ರುತಗೊಳಿಸುವ ಕೆಲಸದ ಜವಾಬ್ದಾರಿ ಹೊತ್ತ "ಮ್ಯಾಡ್ ಆಡ್ಸ್" ತಂಡದವರು ೩ ತುಣುಕುಗಳ ಮೂಲಕ ಜನರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದರು. ಪ್ರವಾಹ-ಪೀಡಿತರ ಸಹಾಯದ ಚಿಕ್ಕದಾದ ಚೊಕ್ಕದಾದ ಮಾಹಿತಿಯೊಂದಿಗೆ ತಮ್ಮ ಪ್ರಸ್ತುತಿಯನ್ನು ಮುಗಿಸಿದರು. ವರುಣನ ಶಾಂತ-ರೌದ್ರ ರೂಪಗಳನ್ನು ಕುರಿತು "ಕಂಟೆಂಪೊರರಿ ನೃತ್ಯ" ಪ್ರದರ್ಶಿಸಲಾಯಿತು. ಮನುಷ್ಯನು ತಾನೂ ಬದುಕಿ ಇನ್ನೊಬ್ಬರಿಗೂ ಬದುಕಲು ಬಿಟ್ಟರೆ ಪ್ರಕೃತಿ-ವಿಕೋಪಗಳು ಸಂಭವಿಸವು ಎಂಬ ಸೂಚನೆಯೊಂದಿಗೆ ನೃತ್ಯ ಕೊನೆಗೊಂಡಿತು.


ಇತ್ತೀಚೆಗಾದ ಪ್ರವಾಹದಿಂದ ತೊಂದರೆಗೊಳಗಾದ ಸ್ಥಳಗಳಲ್ಲೊಂದಾಗ ರಾಯಚೂರು ಜಿಲ್ಲೆಯ ಚಿಕ್ಕಸಗೂರು ಗ್ರಾಮ  ಗೆಳೆಯರ ಬಳಗದ ಭೇಟಿಯನ್ನು ಕುರಿತು ಒಂದು ಸಣ್ಣ ಮಾಹಿತಿ ಅಶೋಕ್ ಕುಮಾರ್ ರವರು ನೀಡಿದರು.  ನಂತರ ಅನುಪಮ-ಅರ್ಚನ ತಂಡದವರಿಂದ ಕರ್ನಾಟಕದ ವಿವಿಧ ಭಾಗಗಳಲ್ಲಿನ ಉಡುಗೆ ತೊಡುಗೆಗಳನ್ನು ಪ್ರದರ್ಶಿಸಲಾಯಿತು. ಆಯಾ ಭಾಗದ ವೈಶಿಷ್ಠ್ಯಗಳನ್ನು ಕೂಡಾ ವೇದಿಕೆಯ ಮೇಲೆ ಪ್ರದರ್ಶಿಸಲಾಗಿತ್ತು. ಹಿನ್ನೆಲೆಯಲ್ಲಿ ಆಯಾ ಭಾಗಗಳ ಕುರಿತು ಸಣ್ಣ ಮಾಹಿತಿಗಳನ್ನು ಹಾಗೂ ಅಲ್ಲಿಯ ಮೂಲದ ಪ್ರಖ್ಯಾತ ವ್ಯಕ್ತಿಗಳ ಮಾಹಿತಿಯನ್ನೂ ನೀಡಲಾಗಿತ್ತು. ಸಣ್ಣ ವಂದನಾರ್ಪಣೆಯ ನಂತರ "ಸಂತೋಷಕ್ಕೆ" ಹಾಗೂ "ಒಂದು ಕನಸು" ಹಾಡುಗಳ ನೃತ್ಯದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.

ಚಿತ್ರಗಳು:

















































ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.

Friday, November 27, 2009

ಅಲ್ಕಾಟೆಲ್ ಲುಸೆಂಟ್ ನಲ್ಲಿ ನಡೆದ ಕನ್ನಡ ನಾಡ ಹಬ್ಬ 2009

ನವೆಂಬರ್ ೧೨, ಗುರುವಾರದಂದು, ನಮ್ಮ ಅಲ್ಕಟೆಲ್-ಲ್ಯೂಸೆಂಟ್ ನಲ್ಲಿ, "ಶ್ರೀಗಂಧ ಕನ್ನಡ ಬಳಗ" ನೇತೃತ್ವದಲ್ಲಿ "ಕನ್ನಡ ರಾಜ್ಯೋತ್ಸವ" ಸಮಾರಂಭವನ್ನು ಹಮ್ಮಿಕೊಂಡಿದ್ದೆವು. ಅಂದು ಎಲ್ಲೆಲ್ಲೂ ಹಬ್ಬದ ವಾತಾವರಣ. ಬೆಳಿಗ್ಗೆ ಎಲ್ಲರನ್ನೂ ಮೊದಲು ಸ್ವಾಗತಿಸಿದ್ದು ಮಾವಿನ ತೋರಣಗಳು, ಹೂವಿನ ಗುಚ್ಛಗಳು, ದೀಪಾಲಂಕೃತವಾಗಿ ನಿಂತಿದ್ದ ಕನ್ನಡಾಂಬೆ ಹಾಗೂ ಕರ್ನಾಟಕದ ಭೂಪಟ ಮತ್ತು ಬಾವುಟಗಳನ್ನೊಳಗೊಂಡ ಸುಂದರ ರಂಗೋಲಿ.  ಅದಕ್ಕೆ ಪೂರಕವಾಗಿ ನಮ್ಮ ನಾಡಿನ ಸಂಸ್ಕೃತಿಯ ಪ್ರತೀಕವೆಂಬಂತೆ ಅಲ್ಲಿಯೇ ಪಕ್ಕದಲ್ಲಿ ಹೆಮ್ಮೆಯಿಂದ ನಿಂತಿತ್ತು ಮೈಸೂರಿನ ಅರಮನೆ ಮತ್ತು ಜಂಬೂಸವಾರಿ.

ಕಾರ್ಯಕ್ರಮವನ್ನು ಕೇವಲ ಕನ್ನಡಿಗರನ್ನು ಮಾತ್ರವಲ್ಲದೇ, ಕನ್ನಡೇತರರ ಸಹೋದ್ಯೋಗಿಗಳನ್ನೂ ಸೇರಿಸಿಕೊಂಡು ಯೋಜಿಸಲಾಗಿತ್ತು. ಹಲವು ದಿನಗಳಿಂದ ಸಹೋದ್ಯೋಗಿಗಳನ್ನು ಕುತೂಹಲಕ್ಕೀಡು ಮಾಡಿದ್ದ ಆಹ್ವಾನ ಫಲಕ, ಎಲ್ಲರೂ ತಮ್ಮದೇ ರೀತಿಯಲ್ಲಿ ಹಬ್ಬಕ್ಕೆ ಅಣಿಯಾಗಲು ಅನುವು ಮಾಡಿಕೊಟ್ಟಿತ್ತು.  ಬಹಳಷ್ಟು ಜನ ವಿಶೇಷವಾದ ಸಾಂಸ್ಕೃತಿಕ ಉಡುಗೆ-ತೊಡುಗೆಗಳಲ್ಲಿ ವಿಜೃಂಭಿಸಿ ಬಣ್ಣದ ಲೋಕವನ್ನು ತೆರೆದಿಟ್ಟಿದ್ದರು.

ದಿನ ಪೂರ್ತಿ, ಉಪಹಾರ ಮಂದಿರದಲ್ಲಿ ಕನ್ನಡದ ಸುಮಧುರ ಹಾಡುಗಳು, ಕನ್ನಡದ ಬಗೆಗಿನ ದೃಶ್ಯಾವಳಿಗಳು ಜನಮನ ತಣಿಸಿತ್ತು.  ಟೋಟಲ್ ಕನ್ನಡ.ಕಾಂ ನವರ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಕನ್ನಡ ಭಾಷೆ, ಸಾಹಿತ್ಯ, ಚಲನಚಿತ್ರಗಳಿಗೆ ಸಂಬಂಧಪಟ್ಟ ಪುಸ್ತಕಗಳು, ಹಾಡಿನ ಮುದ್ರಿಕೆಗಳು ಹಾಗೂ ಇನ್ನಿತರ ವಸ್ತುಗಳ ಪ್ರದರ್ಶನ ಕನ್ನಡಿಗರನ್ನು ಸೆರೆಹಿಡಿದರೆ, ಪ್ರವಾಸೋದ್ಯಮ ಇಲಾಖೆಯ ಕೈಪಿಡಿಗಳ ಮೂಲಕ ಪ್ರವಾಸಿ ಸ್ಥಳಗಳ ಮಾಹಿತಿ, ಕನ್ನಡೇತರ ಮಿತ್ರರ ಆಸಕ್ತಿ ಕೆರಳಿಸಿತ್ತು.

ಅಂದುಕೊಂಡಂತೆ, ಸಂಜೆ ಗಂಟೆಗೆ ಸರಿಯಾಗಿ ಕಾರ್ಯಕ್ರಮವನ್ನು ಪ್ರಾರಂಭಿಸುವ ಹೊತ್ತಿಗೆ, ನಿರೀಕ್ಷೆಗೂ ಮೀರಿ ಕಿಕ್ಕಿರಿದು ಸೇರಿದ್ದ ಕನ್ನಡ ಪ್ರೇಮಿಗಳನ್ನು ನೋಡಿ ಹೃದಯ ತುಂಬಿಬಂದಿತ್ತು. ನಮ್ಮ ಕಛೇರಿಯ ಮುಖ್ಯಸ್ಥೆ ಶ್ರೀಮತಿ ಚಿತ್ರಾ ಕಸ್ತೂರಿಯವರು ಸಾಂಪ್ರದಾಯಿಕವಾಗಿ ದೀಪ ಬೆಳಗುತ್ತಿದ್ದರೆ, ಹಿನ್ನೆಯಲ್ಲಿ "ಹಚ್ಚೇವು ಕನ್ನಡ ದೀಪ" ನೃತ್ಯ ಮತ್ತು ಹಾಡು ಮೇಳೈಸುತ್ತಿತ್ತು

ಬಳಗದ ಪರಿಚಯ ಮತ್ತು ಅದರ ಧ್ಯೇಯೋದ್ದೇಶಗಳ ಬಗೆಗಿನ ನಿರೂಪಣೆ, ಬಳಗದ ಬಗೆಗೆ ಗೌರವ ಮತ್ತು ಆತ್ಮೀಯತೆಯನ್ನು ಮೂಡಿಸಿತು.  ಪೂರ್ವಭಾವಿಯಾಗಿ ನಡೆಸಲ್ಪಟ್ಟ, ನಮ್ಮ ಶಾಲಾದಿನಗಳನ್ನು ನೆನಪಿಸುವಂಥ ಪ್ರಬಂಧ ಸ್ಪರ್ಧೆ, ಆಶುಭಾಷಣ ಸ್ಪರ್ಧೆ ಮತ್ತು ಚಿತ್ರವಿನ್ಯಾಸ ಸ್ಪರ್ಧೆಗಳ ವಿಜೇತರಿಗೆ ಪುಸ್ತಕಗಳು, ಮುದ್ರಿಕೆಗಳ ರೂಪದಲ್ಲಿ ಬಹುಮಾನ ವಿತರಿಸಲಾಯಿತು.

ನಂತರ, ದೀಪಾವಳಿಯ ನಭದಲ್ಲಿ ಒಂದಾದರೊಂದಂತೆ ಅಪ್ಪಳಿಸುವ ಹೂಬಾಣಗಳಂತೆ, ಬಣ್ಣ-ಬಣ್ಣದ ರಂಜನೀಯ ಕಾರ್ಯಕ್ರಮಗಳು ಸಭಿಕರನ್ನು ಕಾಲದ ಪರಿವಿರದಂತೆ ಹಿಡಿದಿಟ್ಟವು. ಭಾವಗೀತೆ, ವಿಶೇಷ ವಾದ್ಯಸಂಗೀತ, ಚಿತ್ರಗೀತೆ, ನಗೆ ನಾಟಕ, ಯಕ್ಷಗಾನದ ಹಾಡು, ಅರ್ಜುನ - ಬಬ್ರುವಾಹನರ ವೀರಾವೇಶ, ಸಮೂಹಗಾನ, ರತ್ನನ ಪದಗಳ ಕುಡುಕನ ಕನ್ನಡಾಭಿಮಾನವನ್ನು ಆಹಾವಹಿಸಿಕೊಂಡ ಕಿರು ನಾಟಕ, ನಾಡಗೀತೆ ಹಾಗೂ ಹಲವು ಕನ್ನಡ ಚಿತ್ರಗೀತೆಗಳ ಸಮೂಹ ನೃತ್ಯ ಕಿವಿ-ಕಣ್ಣಿಗಾದರೆ, ಕಾಯಿ ಹೋಳಿಗೆ, ಬೆಳಗಾವಿ ಕುಂದ, ಅವಲಕ್ಕಿ ಖಾರ ನಾಲಿಗೆಯನ್ನು ತಣಿಸಿದವು.

ವಿನೋದಾವಳಿಗಳ ಮಧ್ಯೆ ಕನ್ನಡಿಗರಿಗೆ, ಕನ್ನಡೇತರರಿಗೆ ನಮ್ಮ ಸಂಸ್ಕೃತಿಯನ್ನು ಪರಿಚಯಿಸಿಕೊಡುವಂತಹ ರಸಪ್ರಶ್ನೆಗಳು ಅಣುಬಾಂಬ್ ಗಳಂತೆ ಸಿಡಿಯುತ್ತಾ ಎಲ್ಲರ ಜ್ಞಾನವನ್ನು ಒರೆಗೆ ಹಚ್ಚಿದವು.  ಕಾರ್ಯಕ್ರಮದ ಕೊನೆಗೆ ನಾಡಗೀತೆಯನ್ನು ಹಾಡುತ್ತಿದ್ದಂತೆ, ಸಭಿಕರೆಲ್ಲರೂ ಎದ್ದು ನಿಂತು ಗೌರವ ಸೂಚಿಸಿದಾಗ ಎಲ್ಲರ ಮೈಯಲ್ಲೂ ಮಿಂಚು ಹರಿದ ಭಾವ

ಒಟ್ಟಿನಲ್ಲಿ ಅಂದಿನ ಪ್ರತಿಯೊಂದು ಕಾರ್ಯಕ್ರಮ ಅಚ್ಚುಕಟ್ಟುತನ, ಸಮಯಪ್ರಜ್ಞೆ, ಕಾರ್ಯದಕ್ಷತೆ, ಪ್ರತಿಭೆ, ಆತ್ಮೀಯತೆ ಮತ್ತು ಎಲ್ಲಕ್ಕೂ ಮಿಗಿಲಾಗಿ ಕನ್ನಡ ಪ್ರೇಮದಲ್ಲಿ ಮೆದ್ದು ಜನರ ಮನದಲ್ಲಿ ಅಚ್ಚಳಿಯದಂತೆ ಮಾಡಿತು.

ಸಂಭ್ರಮದ ಹಲವು ಚಿತ್ರಗಳು ಇಲ್ಲಿವೆ:







































































































ಹೆಚ್ಚಿನ ಚಿತ್ರಗಳು ಇಲ್ಲಿವೆ:

ದೃಶ್ಯಗಳು:

ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.

Thursday, November 26, 2009

ಟಿ.ಸಿ.ಎಸ್ ನಲ್ಲಿ ಕನ್ನಡ ನಾಡಹಬ್ಬ 2009

ಟಿ.ಸಿ.ಎಸ್ ಬೆಂಗಳೂರಿನ ಆಫೀಸ್ ನಲ್ಲಿ ಅದ್ಧೂರಿಯಾಗಿ ನಡೆದ ೨೦೦೯ರ ಕನ್ನಡ ನಾಡ ಹಬ್ಬದ ಕೆಲವು ಚಿತ್ರಗಳು ಇಲ್ಲಿವೆ.
ಕಾರ್ಯಕ್ರಮಕ್ಕೆ ಅತಿಥಿಯಾಗಿ ಖ್ಯಾತ ನಿರ್ದೇಶಕ, ಮುಂಗಾರು ಮಳೆ, ಗಾಳಿಪಟ, ಮನಸಾರೆ ಚಿತ್ರದ ರೂವಾರಿ ಯೋಗರಾಜ್ ಭಟ್ ಆಗಮಿಸಿದ್ದು ವಿಶೇಷವಾಗಿತ್ತು.




































































ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.