Monday, November 29, 2010

ಸ್ಯಾಪ್ ಲ್ಯಾಬ್ಸ್ ಅಲ್ಲಿ ಕನ್ನಡ ನಾಡಹಬ್ಬ 2010




ಅಕ್ಟೋಬರ್ ೨೮ರಂದು ಸ್ಯಾಪ್ ಲ್ಯಾಬ್ಸ್ ಕಛೇರಿಯಲ್ಲಿ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು.ಬೆಳಗ್ಗೆ ೮:೩೦ ರ ಸುಮಾರಿಗೆ ಶ್ರೀ. ಕೆ.ಕೆ. ಲಕ್ಷ್ಮೀಪ್ರಸಾದ್ ರವರು ಧ್ವಜಾರೋಹಣವನ್ನು ನೆರವೇರಿಸುವುದರ ಮೂಲಕ ಈ ವರ್ಷದ ರಾಜ್ಯೋತ್ಸವದ ಸಂಭ್ರಮ ಶುರುವಾಯಿತು. ಧ್ವಜಾರೋಹಣದ ಸಂದರ್ಭದಲ್ಲಿ ನಾಡಗೀತೆಯಾದ "ಜೈ ಭಾರತ ಜನನಿಯ ತನುಜಾತೆ"ಯನ್ನು ನಾವೆಲ್ಲರೂ ಹಾಡಿದೆವು.

ತದನಂತರ ಅಲ್ಲಿ ನೆರೆದಿದ್ದಂತಹ ಎಲ್ಲಾ ಕನ್ನಡ ಪ್ರೇಮಿಗಳಿಗೆ ಸಿಹಿಯನ್ನು ಹಂಚಿದ್ದಾಯಿತು.ನಂತರ ಶುರುವಾಯಿತು ನೋಡಿ, ಮಧ್ಯಾಹ್ನದ ಸಂಭ್ರಮಕ್ಕೆ ಕಛೇರಿಯ ಒಳಾಂಗಣ ಕೆಫ಼ೆಟೇರಿಯವನ್ನು ಶೃಂಗರಿಸುವ ಸಂಭ್ರಮ. ಅಲ್ಲೇ ಇದ್ದ ಪುಟ್ಟ ವೇದಿಕೆಯನ್ನು ಹೂವಿನಿಂದ ಸಿಂಗರಿಸಿದ್ದಾಯಿತು.

ಅಷ್ಟರಲ್ಲಾಗಲೆ ಡೊಳ್ಳು ಕುಣಿತ ಮತ್ತು ವೀರಭದ್ರ ಕುಣಿತ ತಂಡದವರ ಆಗಮನವಾಯಿತು. ಸರಿ ಅವರಿಗೆ ಊಟ ಮಾಡಿ ತಯರಾಗಿರಲು ಹೇಳಿ, ನಮ್ಮ ಸಹೋದ್ಯೋಗಿಗಳನ್ನೇ ಕರಗವನ್ನು ಹೊತ್ತು ತರಲು ಸಿದ್ಧಮಾಡಲು ಶುರುಮಾಡಿದೆವು. ಇದರ ಜೊತೆಗೆ ವಿಡಿಯೊ ಹಾಗು ಧ್ವನಿವರ್ಧಕಗಳನ್ನು ಜೋಡಿಸುವ ಕಾರ್ಯ ನಡೆಯುತಿತ್ತು. ಇಷ್ಟೆಲ್ಲಾ ಆಗುವಷ್ಟರಲ್ಲಿ ಗಂಟೆ ೧ ಆಯಿತು.

ಡೊಳ್ಳು ಕುಣಿತ ಮತ್ತು ವೀರಭದ್ರ ಕುಣಿತ ತಂಡದವರನ್ನು ಕಛೇರಿಯ ಒಳಗೆ ಒಂದು ಸುತ್ತು ತಮ್ಮ ಕಲೆಯನ್ನು ಪ್ರದರ್ಶಿಸುತ್ತಾ ಬಂದರು. ಡೊಳ್ಳಿನ ಸದ್ದಿಗೆ ಇಡೀ ಕಛೇರಿಯ ಜನ ರೋಮಾಂಚನಗೊಂಡರು. ಅವರು ನಿರ್ಮಿಸಿದ ಮಾನವ ಪಿರಮಿಡ್ ಮಾದರಿಯಲ್ಲಿ ಡೊಳ್ಳು ಬಾರಿಸುವುದನ್ನು ಕಂಡ ನಮ್ಮ ಪ್ಯಾಟೆ ಮಂದಿ ಆಶರ್ಯ ಚಕಿತರಾದರು. ಇನ್ನು ವೀರಭದ್ರ ಕುಣಿತವನ್ನು ಕಂಡ ಜನ ಊಟವನ್ನು ಮರೆತು ಅವರ ಕಲೆಯನ್ನು ಸವಿಯುತ್ತ ನಿಂತರು.

ವೀರಭದ್ರ ಕುಣಿತದವರ ಮುಖಭಾವವನ್ನು ವರ್ಣಿಸಲು ಪದಗಳು ಸಿಗೋದಿಲ್ಲಾ..ಅದೇನಿದ್ರು ನೋಡಿ ಸವಿಯೋದೆ ಚೆಂದ. ಇದೆಲ್ಲಾ ಆಗುತ್ತಿರಬೇಕಾದ್ರೆ.. ಅಲ್ಲಿ ಇನ್ನೊಂದು ಕಡೆ ಕರಗದ ಉತ್ಸವ ಶುರುವಾಯಿತು. ಈ ಸಲದ ರಾಜ್ಯೋತ್ಸವದ ಥೀಮ್ "ಬೆಂಗಳೂರು ದರ್ಶನ" ವಾಗಿದ್ದ ರಿಂದ, ಕರಗದ ಜೊತೆ ಕೆಂಪೇಗೌಡರ ವೇಷಧಾರಿಯೊಬ್ಬರು ಸಭಾಂಗಣದ ಒಳಗೆ ನಡೆದು ಬಂದರು. ಕರಗಕ್ಕೆ ಡೊಳ್ಳು ಕುಣಿತ ಹಾಗು ವೀರಭದ್ರ ಕುಣಿತದವರಿಂದ ಸ್ವಾಗತ ಸಿಕ್ಕಿತು.

ನಂತರ ಕರಗಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮವನ್ನು ಸರಿಯಾಗಿ ೨:೪೫ ಗೆ ಶುರುಮಡಿದೆವು. ಶಿವು ಹಾಗು ಶ್ರೀಲಕ್ಷ್ಮಿ ಯವರ ಆತಿಥ್ಯದಲಿ ಕಾರ್ಯಕ್ರಮ ಗಣಪನ ಆರಾಧನೆಯೊಂದಿಗೆ ಶುರುವಾಯಿತು. ಈ ಸಲ ಗಣಪನ ಪೂಜೆ ನೃತ್ಯರೂಪದಲ್ಲಿ ಪ್ರಸ್ತುತ ಪಡಿಸಿದ್ದು ನಮ್ಮವರೇ ಆದ ಸಿಂಧುರವರು.

ಅಷ್ಟರಲ್ಲಿ ನಮ್ಮ ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀ ಯೋಗರಾಜ ಭಟ್ ಅವರು ಆಗಮಿಸಿದರು. ಭಾರಿ ಚಪ್ಪಾಳೆಯೊಂದಿಗೆ ಅವರನ್ನು ಸಭೆಯಲ್ಲಿ ನೆರೆದಿದ್ದ ಜನರು ಸ್ವಾಗತಿಸಿದರು. ಅವರ ಜೊತೆ ನಮ್ಮವರೆ ಆದ ಶ್ರೀ. ಕೆ.ಕೆ. ಲಕ್ಷ್ಮೀಪ್ರಸಾದ್ ಮತ್ತು ಶ್ರೀ ಭುವನೇಶ್ವರ ನಾಯಕ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಮಯದಲ್ಲಿ ಶ್ರಿನಿ ಮತ್ತು ತಂಡದವರು "ಹಚ್ಚೇವು ಕನ್ನಡದ ದೀಪ" ಹಾಡನ್ನು ಹಾಡಿದರು.

ಈ ವರ್ಷ ಗತಿಸಿದ ಕರ್ನಾಟಕದ ಮೇರು ವ್ಯಕ್ತಿಗಳಿಗೆ ಹಾಡಿನ ಮೂಲಕ ಶ್ರಧ್ಧಾಂಜಲಿಯನ್ನು ಅರ್ಪಿಸಲಾಯಿತು. ನಂತರ ಶ್ರೀ. ಯೋಗರಾಜ್ ಭಟ್ ಅವರು ಈ ಟೆಕ್ಕಿ ಯುಗದಲ್ಲಿ ಸಂಬಂಧಗಳ ಕುರಿತು ಮಾತನ್ನಾಡಿದರು. ತಮಾಷೆಯಾಗೆ ಇದ್ದ ಅವರ ಮಾತುಗಳು, ಮುಗಿಯುವ ಅಂತಕ್ಕೆ ಬಂದಾಗ ನಮ್ಮಲ್ಲಿ ಗಂಭೀರವಾದ ಆಲೋಚನೆಯನ್ನುಂಟು ಮಾಡಿತು.

ಸಭಿಕರ "ಒಂದು ಹಾಡು" ಎಂಬ ಒತ್ತಾಯಕ್ಕೆ ಮಣಿಯದ ಅವರು ತಮ್ಮ ಪಂಚರಂಗಿ ಸಿನಿಮಾದ "ಗಳು" ಡೈಲಾಗ್ ಅನ್ನು ನಮ್ಮ ಸಾಫ್ಟವೇರ್ ಉದ್ಯಮಕ್ಕೆ ಸರಿಯಾಗಿ ಬದಲಾಯಿಸಿ ಹೇಳಿ ಪ್ರೇಕ್ಷಕರಿಂದ ಭರ್ಜರಿ ಚಪ್ಪಾಳೆ ಗಿಟ್ಟಿಸಿಕೊಂಡರು. ನಂತರ ಕನ್ನಡ ಚಲನಚಿತ್ರಗಳ ಕೆಲವು ಗೀತೆಗಳನ್ನು ಹಾಡಲಾಯಿತು. ಹರ್ಷ ಮತ್ತು ತಂಡದವರಿಂದ "ಬೆಂಗಳೂರು ೨೨೫೦" ಎಂಬ ನಾಟಕ ನೆರದಿದ್ದ ಸಭಿಕರಿಗೆ ಮನೋರಂಜನೆ ಜೊತೆಗೆ ಕನ್ನಡಿಗರ ಕರ್ತವ್ಯವನ್ನು ನೆನಪಿಸಿತು.

ನಂತರ ವಿಠ್ಠಲ್ ಮತ್ತು ತಂಡದವರಿಂದ "ತಗಡಾನಿಕ್" ಎಂಬ ಟೈಟಾನಿಕ್ ಚಲನಚಿತ್ರದ ಸ್ಪೂಫ್ ಎಲ್ಲರನ್ನು ನಗೆಗಡಲಲ್ಲಿ ಮುಳುಗಿಸಿತು. ನಂತರ ಕೌಶಿಕ್ ಮತ್ತು ತಂಡದವರಿಂದ "ಮಠ" ಎಂಬ ಮ್ಯಾಡ್ ಆಡ್ಸ್ ಪ್ರೇಕ್ಷಕರನ್ನು ಹುಚ್ಚೆಬಿಸಿತು."ಬೆಂಗಳೂರು ರ್ಶನ" ಫ್ಯಾಶನ್ ಷೋ ದಲ್ಲಿ ಮೊದಲಿಗೆ ಬಂದಿದ್ದು ನಾಡ ಪ್ರಭು ಕೆಂಪೇಗೌಡ.

ನಂತರ ಬೆಂಗಳೂರಿನ ದೇವಸ್ಥಾನಗಳ ಪರಿಚಯ, ಬೆಂಗಳೂರಿನ ಫುಡ್ ಸ್ಟ್ರೀಟ್ ಪರಿಚಯ, ಚಿತ್ರ ಸಂತೆ, ಕ.ರ.ವೇ, ಕಿಂಗ್ ಫಿಷರ್/ ಆರ್.ಸಿ.ಬಿ, ಬೆಂಗಳೂರಿನ ನೈಟ್ ಲೈಫ್ ಬಗ್ಗೆ ಪರಿಚಯಿಸಲಾಯಿತು.ತದನಂತರ ಚಿರಂಜೀವಿ ಮತ್ತು ತಂಡದವರಿಂದ ನೃತ್ಯ ಪ್ರದರ್ಶನ ನಡೆಯಿತು. ಇದರೊಂದಿಗೆ ಈ ಸಲದ ರಾಜ್ಯೋತ್ಸವದ ಕಾರ್ಯಕ್ರಮ ಮುಕ್ತಾಯವಾಯಿತು.