Saturday, December 4, 2010

ಟಿ.ಸಿ.ಎಸ್. ನಲ್ಲಿ ಕನ್ನಡ ರಾಜ್ಯೋತ್ಸವ - ೨೦೧೦

ಮೊನ್ನೆ ಅಂದರೆ ನವೆಂಬರ್ ೧೨ ರಂದು ಟಿ ಸಿ ಎಸ್ ನಲ್ಲಿ (ಧಾರಾ ಕಟ್ಟಡ) ಕನ್ನಡ ರಾಜ್ಯೋತ್ಸವದ ಆಚರಣೆಯನ್ನು ಬಹಳ ಸೋಗಸಾಗಿ, ಅಚ್ಚುಕಟ್ಟಾಗಿ ಆಯೋಜಿಸಲಾಗಿತ್ತು ಹಾಗೂ ನಾಡಹಬ್ಬದ ಆಚರಣೆಯ ಸಂದರ್ಭದಲ್ಲಿ ನಮ್ಮ ಕಂಪನಿಯ ಕೆಲ "ಕಲಾಪ್ರತಿಭಾನ್ವಿತ" ಸಹೋದ್ಯೋಗಿಗಳು ಅತ್ಯಂತ ಆಸಕ್ತಿಯಿಂದ, ಅಭಿಮಾನದಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಮಾರಂಭಕ್ಕೆ ಆಗಮಿಸಿದವರೆಲ್ಲರ ಹೃಮನಗಳನ್ನು ತಣ್ಣಿಸುವ ಹಾಗೆ ನಡೆಸಿಕೊಟ್ಟರು. ಸಮಾರಂಭಕ್ಕೆ ನಮ್ಮೆಲ್ಲರ ನೆಚ್ಚಿನ ಮಾಸ್ಟರ್ ಹಿರಣ್ಣಯ್ಯನವರು ಮುಖ್ಯ ಅತಿಥಿಗಳಾಗಿ ಬಂದಿದ್ದರು. ಸಂಜೆ ೪.೩೦ ರ ವೇಳೆಗೆ ಸರಿಯಾಗಿ ದೀಪ ಬೆಳಗಿಸುವ ಮೂಲಕ ಹಿರಣ್ಣಯ್ಯನವರು ಕಾರ್ಯಕ್ರಮಕ್ಕೆ ಮುನ್ನುಡಿ ಬರೆದರು. ನಾಡಗೀತೆ ಹಾಗು ಹಚ್ಚೇವು ಕನ್ನಡದ ದೀಪ ಕವನದ ಸಾಲುಗಳನ್ನು ಸುಶ್ರಾವ್ಯವಾಗಿ ಹಾಡುವುದರ ಮೂಲಕ ಕಾರ್ಯಕ್ರಮ ಶುರುವಾಯಿತು.

ಅನಂತರದಲ್ಲಿ ಮೂಡಿಬಂದ ಹಿರಣ್ಣ ಯ್ಯನವರ ಕನ್ನಡ ಹಾಗೂ ಇಂಗ್ಲೀಶ್ ಭಾಷೆಗಳ ಮಿಶ್ರಿತ ಮಿಂಚಿನ ವಾಗ್ಜರಿ ನೆರವೇರಿದವರಲ್ಲಿ ತಮ್ತಮ್ಮ ಮಾತೃಭಾಷಾಭಿಮಾನದ ಕಿಚ್ಚನ್ನು ಹೊತ್ತಿಸುವಂತೆ ಇತ್ತು.ಕನ್ನಡದಷ್ಟೇ ಇಂಗ್ಲೀಶ್ ಭಾಷೆಯ ಮೇಲೂ ಅವರಿಗಿದ್ದ ಭಾಷಾ ಬಿಗಿಹಿಡಿತ ಹಾಗೂ ಮಾತಿನ ಚತುರತೆಯನ್ನು ಕಂಡು ಕನ್ನಡಿಗ ಸಹೋದ್ಯೋಗಿಗಳೇಕೆ ಪರ ಭಾಷಾ ಸಹೋದ್ಯೋಗಿಗಳು ಸಹ ಅಂದು ಬೆರಗಾಗಿ ಹೋಗಿದ್ದರು. ಎಪ್ಪತ್ತೇಳರ ಇಳಿವಯಸ್ಸಿನಲ್ಲೂ ಇಪ್ಪತ್ತೇಳರ ಯುವಕನಂತೆ ಪ್ರಬುದ್ದವಾದ ಹಾಗು ಹಾಸ್ಯ ತುಂಬಿದ ಮಾತಿನ ಜೋರುಮಳೆಯನ್ನೇ ಸುರಿಸಿದರು.ಅಲ್ಲದೆ ಕನ್ನಡ ಭಾಷೆಗೆ ಮಾಸ್ತಿ, ಗುಂಡಪ್ಪನವರು, ಕೈಲಾಸಂ, ನಾ ಕಸ್ತೂರಿ ಮುಂತಾದ ಪರ ಮಾತೃಭಾಷ ಕವಿಗಳ ಅಪರಿಮಿತ ಕೊಡುಗೆಯನ್ನು ಸ್ಮರಿಸಿದರು.

ಹಿರಣ್ಣಯ್ಯನವರ ಮಾತಿನ ಪ್ರವಾಹ ನಿಲ್ಲುತ್ತಿದ್ದಂತೆಯೇ, ಹಿರಿಯ ಸಹೋದ್ಯೋಗಿಗಳು ಆಯೋಜಿಸಿದ್ದ "ಥಟ್ ಅಂತ ಹೇಳಿ" ಕನ್ನಡ ನಾಡಿಗೆ ಸಂಬಂಧಿಸಿದ ರಸಪ್ರಶ್ನೆಗಳನ್ನು ಕೇಳುವ ಮೂಲಕ ಒಂದರ್ಥದಲ್ಲಿ ವೀಕ್ಷಕರನ್ನು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಾಡಿತು.

ರಸಪ್ರಶ್ನೆ ಕಾರ್ಯಕ್ರಮವೂ ಮುಗಿಯುತ್ತಿದ್ದಂತೆಯೇ ಯುವಸಹೋದ್ಯೋಗಿಗಳಿಂದ ಚಲನಚಿತ್ರ ಗೀತೆಗಳ ಗಾಯನ ಸ್ಪರ್ಧೆ ಇತ್ತು. ಅನಿಸುತಿದೆ ಯಾಕೋ ಇಂದು, ನೀ ಸನಿಹಕೆ ಬಂದರೆ.., ನೀ ಅಮೃತಧಾರೆ, ಗಿಲ್ ಗಿಲ್ ಗಿಲಕ್ಕ್ ಕಾಲ್ಗೆಜ್ಜೆ ಝಣಕ್ಕ್.., ಈ ಗೀತೆಗಳನ್ನು ಹಾಡಿದರು. ಅನಿಸುತಿದೆ ಯಾಕೋ ಇಂದು ಹಾಡಿಗೆ ಪ್ರಥಮ ಬಹುಮಾನ ಬಂತು.

ಗಾಯನ ಸ್ಪರ್ಧೆ ಮುಗಿದ ಬಳಿಕ ಹೆಚ್ ಕೆ ರಘು ಎಂಬುವ ನಮ್ಮ ಕಂಪನಿಯ ಹಿರಿಯ ಸಹೋದ್ಯೋಗಿ, ಅವರು ಮಧುರವಾಗಿ ಹಲವಾರು ಕನ್ನಡ ಚಲನಚಿತ್ರ ಗೀತೆಗಳನ್ನು ಹಾಡುವ ಮೂಲಕ (ಅದರಲ್ಲೂ ಹೆಚ್ಚಾಗಿ ಕನ್ನಡ ನಾಡು, ನುಡಿ ಹಾಗು ಸಂಸ್ಕೃತಿಗೆ ಸಂಬಂಧಿಸಿದ ಗೀತೆಗಳನ್ನು) ಕೆಲಕಾಲ ನಮ್ಮನ್ನು ನಾಡು, ನುಡಿ ವಿಷಯದಲ್ಲಿ ಭಾವಪರವಶರನ್ನಾಗಿ ಮಾಡಿಬಿಟ್ಟಿದ್ದರು.

ಸಮಾರಂಭದ ಮಧ್ಯಾವಧಿಯಲ್ಲಿ ಸಭಾಂಗಣ ವೀಕ್ಷಕರಿಂದ ತುಂಬಿಹೋಗಿತ್ತು, ನಮ್ಮ ಕಂಪನಿಯಲ್ಲಿ ನಡೆಸಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಸಿಕ್ಕ ಅಭೂತಪೂರ್ವ ಬೆಂಬಲ ಮತ್ತು ಯಶಸ್ಸು ವೀಕ್ಷಕರ ಹಾಜರಾತಿಯ ಮೂಲಕ ತೋರ್ಪಡಿಸುತ್ತಿತ್ತು.

ಅಲ್ಲದೆ ರಿಚರ್ಡ್ ಲೂಯಿಸ್ ಹಾಗು ಎಂ. ಎಸ್ ನರಸಿಂಹಮೂರ್ತಿಯವರು ಕಾರ್ಯಕ್ರಮಕ್ಕೆ ಆಗಮಿಸಿ, ತಮ್ಮ ಹಾಸ್ಯದ ಮಾತುಗಳ ಮೂಲಕ ನಮ್ಮನ್ನೆಲ್ಲ ನಗೆಯ ಹೊಳೆಯಲ್ಲಿ ತೇಲಿಸಿದರು. ಒಂದು ಹಂತದಲ್ಲಿ ರಿಚರ್ಡ್ ಲೂಯಿಸ್ ರ ಹಾಸ್ಯದ ಮಾತುಗಳ ಮೂಡಿಗೆ ಸಿಕ್ಕು ಸಮಯವಾದುದ್ದೆ ಅರಿವಿಗೆ ಬರಲಿಲ್ಲ

ನಂತರದಲ್ಲಿ ಶಿವ ಅಂತ ಹೋಗುತ್ತಿದೆ ರೋಡಿನಲ್ಲಿ.. (ಜಾಕಿ) , ಅರೆರೆರೆ ಗಿಣಿರಾಮ.. (ಗಂಧದಗುಡಿ), ಇನ್ನೂ ಹಲವಾರು ಕನ್ನಡದ ಹಾಡುಗಳಿಗೆ ಯುವಸಹೋದ್ಯೋಗಿಗಳು ಡ್ಯಾನ್ಸ್ ಮಾಡಿದರು ಹಾಗು ಕನ್ನಡ ನಾಡು, ನುಡಿ ಕುರಿತಾದ ಗೀತೆಗೆ ಕೆಲ ಸಹೃದಯಿ ಸಹೋದ್ಯೋಗಿಗಳು ಸಮೂಹ ಡ್ಯಾನ್ಸು ಮಾಡಿದರು . ಇನ್ನೂ ಕೆಲ ಸಹೋದ್ಯೋಗಿಗಳು ತುಂಬಾ ಹಾಸ್ಯಭರಿತವಾದ ಸ್ಕಿಟ್ (ರಜನಿ ಇನ್ ಇನ್ಸೈಡ್) ಮಾಡಿದರು. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮನ್ನೆಲ್ಲ ಬೆರಗಾಗಿ ಮಾಡಿದ್ದು ಒರಿಸ್ಸಾದ ಯುವಸಹೋದ್ಯೋಗಿಯು ಶಿವ ಅಂತಾ ಹೋಗುತ್ತಿದ್ದೆ ರೋಡಿನಲ್ಲಿ ಈ ಹಾಡನ್ನು ಬಹಳ ಸುಶ್ರಾವ್ಯವಾಗಿ ಹಾಡಿದ್ದು ಹಾಗೂ ಮತ್ತೋರ್ವ ಒರಿಸ್ಸಾದ ಯುವಸಹೋದ್ಯೋಗಿಯು ಹಾಡು ಸಂತೋಷಕ್ಕೆ (ಶಂಕರ್ ನಾಗ್ ಅವರ ಗೀತಾ ಚಿತ್ರದ ಹಾಡು) ಹಾಡಿಗೆ ಡ್ಯಾನ್ಸು ಮಾಡಿದ್ದು.

ಕಾರ್ಯಕ್ರಮದಲ್ಲಿ ಕೊನೆಯಲ್ಲಿ ನಮ್ಮ ಕಂಪನಿಯ ಹಿರಿಯ ಸಹೋದ್ಯೋಗಿ ಹೆಚ್ ಕೆ ರಘು ಅವರು ಭಾವಪೂರ್ಣವಾಗಿ ಹಾಡಿದ ಕುಲದಲ್ಲಿ ಕೀಳಾವುದೋ ಹುಚ್ಚಪ್ಪ..ಮತದಲ್ಲಿ ಮೇಲ್ಯಾವುದೋ ಗೀತೆಯೊಂದಿಗೆ ನಮ್ಮ ಕಂಪನಿಯ ಈ ಸಲದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಮುಕ್ತಾಯವಾಯಿತು. ಮುಂದಿನ ವರುಷ ನಮ್ಮ ಕನ್ನಡ ರಾಜ್ಯೋತ್ಸವವನ್ನು ಇನ್ನೂ ಹೆಚ್ಚು ಅರ್ಥಪೂರ್ಣವಾಗಿ ಹಾಗು ವೈಭವದಿಂದ ಆಚರಣೆ ಮಾಡಬೇಕೆಂದು ಯೋಜನೆಯಲ್ಲಿ ಮನೆಕಡೆ ಹೆಜ್ಜೆ ಹಾಕಿದೆವು..


ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.

Wednesday, December 1, 2010

ಮೈಂಡ್ ಟೆಕ್ 5ನೇ ಕನ್ನಡ ರಾಜ್ಯೋತ್ಸವ - 2010

ಮೈಂಡ್ ಟೆಕ್ ನಲ್ಲಿ ಪ್ರತಿ ವರ್ಷವೂ ಆಚರಿಸುವಂತೆ ಈ ವರ್ಷವೂ ಕನ್ನಡ ರಾಜ್ಯೋತ್ಸವವನ್ನು ನವೆಂಬರ್ 19 ರಂದು ಆಚರಿಸಲಾಯಿತು. ಇದು 5 ನೇ ವರ್ಷದ ಆಚರಣೆ ಎಂದು ಹೇಳಲು ಹೆಮ್ಮೆ.

ಕಾರ್ಯಕ್ರಮವು ಕೆಳಕಂಡಂತೆ ನಡೆಯಿತು.

1. ಬೆಳಿಗ್ಗೆ 11:30 ಗಂಟೆಗೆ ಎಲ್ಲರು ಆಚರಣೆಗೆ ಸೇರಿದೆವು. ಹಿಂದಿನ ದಿನವೇ ಬಣ್ಣದ ರಂಗೋಲಿಯನ್ನು ಹಾಕಿದ್ದೆವು. ಕರ್ನಾಟಕದ ಭೂಪಟದ ಅಲಂಕಾರ ಬೆಳಿಗ್ಗೆ 9ರೊಳಗೆ ಮುಗಿಯಿತು.

2. ಕಂಪನಿಯ ಗಣ್ಯರು ಆಗಮಿಸಿದರು. ಅವರಿಂದ ದೀಪ ಬೆಳಗಿಸಿದೆವು.

3. ಹಚ್ಚೇವು ಕನ್ನಡದ ದೀಪ ಹಾಡನ್ನು ಹಾಡಿದೆವು.

4. ಕಾರ್ಯಕ್ರಮ ನಿರೂಪಣೆ ಜವಾಬ್ದಾರಿಯನ್ನು ಮಧುಕರ್ವರು ವಹಿಸಿಕೊಂಡು ಚೆನ್ನಾಗಿ ನಡೆಸಿಕೊಟ್ಟರು. ನಿರೂಪಣೆ ಪೂರ್ತಿ ಕನ್ನಡದಲ್ಲೇ ಇದ್ದಿದ್ದು ವಿಶೇಷ.

5. ನಂತರ ನಾಡಗೀತೆ - ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ ಹಾಡಲಾಯಿತು. ಇದನ್ನು ಹಾಡಲು ಒಂದು ತಂಡ, ಒಂದು ವಾರದಿಂದ ಅಭ್ಯಾಸ ಮಾಡಿತ್ತು. ಚೆನ್ನಾಗಿ ಹಾಡಿದರು.

6. ಕನ್ನಡ ನಾಡು, ನುಡಿ ಹಾಗೂ ಜನರ ಬಗ್ಗೆ ಮಧುಕರ್ ಮಾತನಾಡಿದರು.

7. ಗಣ್ಯರು ಕೂಡ ಕನ್ನಡ ಹಾಗು ಕರ್ನಾಟಕದ ಬಗ್ಗೆ ಅವರಿಗಿರುವ ಅಭಿಪ್ರಾಯವನ್ನು ಹೇಳಿದರು.

8. ಸಂದೀಪ್ ವರು "ಗೀಯ ಪದ" ಹಾಡನ್ನು ಹಾಡಿದರು. ಗೀಯ ಸಾಲುಗಳನ್ನು ನೆರೆದಿದಿದ್ದ ಸಭೀಕರೆಲ್ಲ ಜೊತೇಲಿ ಹೇಳಿದರು.

9. ಪ್ರತಿ ವರ್ಷ ಆಚರಣೆಯ ಸಂದರ್ಭದಲ್ಲಿ ಕರ್ನಾಟಕದ ಸಿಹಿ ತಿಂಡಿಯನ್ನು ಎಲ್ಲ ಉದ್ಯೋಗಿಗಳಿಗೆ ಹಂಚುವುದರ ಮೂಲಕ ಅದರ ಪರಿಚಯ. ಇದು ಮೈಂಡ್ ಟೆಕ್ ಕನ್ನಡ ರಾಜ್ಯೋತ್ಸವದ ವಿಶೇಷ . ವರ್ಷ "ಕಜ್ಜಾಯ" ಹಾಗು "ಮದ್ಧೂರು ವಡೆ" ಹಂಚಿದೆವು.

10. ಎಲ್ಲಾ ಉದ್ಯೋಗಿಗಳಿಗೂ ಕನ್ನಡದ ಕಾಲೇನ್ಡರ್ ಕೊಡಲಾಯಿತು. ಕಾಲೇನ್ಡರ್ನಲ್ಲಿ ಅವರ ಹೆಸರನ್ನು ಕನ್ನಡದಲ್ಲಿಯೇ ಬರೆಯಲಾಗಿತ್ತು. ಎಲ್ಲರು ಇದನ್ನು ನೋಡಿ ಆಶ್ಚರ್ಯ ಹಾಗು ಸಂತೋಷ ವ್ಯಕ್ತ ಪಡಿಸಿದರು.
11. ಸಂಜೆ ಕನ್ನಡ ರಸಪ್ರಶ್ನೆ , ಪರಭಾಷಿಕರಿಗೆ ಕನ್ನಡದಲ್ಲಿ ಮಾತನಾಡುವ ಸ್ಪರ್ಧೆ, ಹಾಡು ಹಾಗು ಕರ್ನಾಟಕದ ಉಡುಗೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಎಲ್ಲರು ಭಾಗವಹಿಸಿದರು. ಗೆದ್ದವರಿಗೆ ಚನ್ನಪಟ್ಟಣದ ಕೀ-ಚೈನ್ ಕೊಡಲಾಯಿತು. ಮತ್ತೆ ಪರಭಾಷಿಕರಿಗೆ ಕನ್ನಡ ಕಲಿಯುವ ಪುಸ್ತಕ ಕೊಡಲಾಯಿತು.

ಚಿತ್ರಗಳು:

Monday, November 29, 2010

ಸ್ಯಾಪ್ ಲ್ಯಾಬ್ಸ್ ಅಲ್ಲಿ ಕನ್ನಡ ನಾಡಹಬ್ಬ 2010




ಅಕ್ಟೋಬರ್ ೨೮ರಂದು ಸ್ಯಾಪ್ ಲ್ಯಾಬ್ಸ್ ಕಛೇರಿಯಲ್ಲಿ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು.ಬೆಳಗ್ಗೆ ೮:೩೦ ರ ಸುಮಾರಿಗೆ ಶ್ರೀ. ಕೆ.ಕೆ. ಲಕ್ಷ್ಮೀಪ್ರಸಾದ್ ರವರು ಧ್ವಜಾರೋಹಣವನ್ನು ನೆರವೇರಿಸುವುದರ ಮೂಲಕ ಈ ವರ್ಷದ ರಾಜ್ಯೋತ್ಸವದ ಸಂಭ್ರಮ ಶುರುವಾಯಿತು. ಧ್ವಜಾರೋಹಣದ ಸಂದರ್ಭದಲ್ಲಿ ನಾಡಗೀತೆಯಾದ "ಜೈ ಭಾರತ ಜನನಿಯ ತನುಜಾತೆ"ಯನ್ನು ನಾವೆಲ್ಲರೂ ಹಾಡಿದೆವು.

ತದನಂತರ ಅಲ್ಲಿ ನೆರೆದಿದ್ದಂತಹ ಎಲ್ಲಾ ಕನ್ನಡ ಪ್ರೇಮಿಗಳಿಗೆ ಸಿಹಿಯನ್ನು ಹಂಚಿದ್ದಾಯಿತು.ನಂತರ ಶುರುವಾಯಿತು ನೋಡಿ, ಮಧ್ಯಾಹ್ನದ ಸಂಭ್ರಮಕ್ಕೆ ಕಛೇರಿಯ ಒಳಾಂಗಣ ಕೆಫ಼ೆಟೇರಿಯವನ್ನು ಶೃಂಗರಿಸುವ ಸಂಭ್ರಮ. ಅಲ್ಲೇ ಇದ್ದ ಪುಟ್ಟ ವೇದಿಕೆಯನ್ನು ಹೂವಿನಿಂದ ಸಿಂಗರಿಸಿದ್ದಾಯಿತು.

ಅಷ್ಟರಲ್ಲಾಗಲೆ ಡೊಳ್ಳು ಕುಣಿತ ಮತ್ತು ವೀರಭದ್ರ ಕುಣಿತ ತಂಡದವರ ಆಗಮನವಾಯಿತು. ಸರಿ ಅವರಿಗೆ ಊಟ ಮಾಡಿ ತಯರಾಗಿರಲು ಹೇಳಿ, ನಮ್ಮ ಸಹೋದ್ಯೋಗಿಗಳನ್ನೇ ಕರಗವನ್ನು ಹೊತ್ತು ತರಲು ಸಿದ್ಧಮಾಡಲು ಶುರುಮಾಡಿದೆವು. ಇದರ ಜೊತೆಗೆ ವಿಡಿಯೊ ಹಾಗು ಧ್ವನಿವರ್ಧಕಗಳನ್ನು ಜೋಡಿಸುವ ಕಾರ್ಯ ನಡೆಯುತಿತ್ತು. ಇಷ್ಟೆಲ್ಲಾ ಆಗುವಷ್ಟರಲ್ಲಿ ಗಂಟೆ ೧ ಆಯಿತು.

ಡೊಳ್ಳು ಕುಣಿತ ಮತ್ತು ವೀರಭದ್ರ ಕುಣಿತ ತಂಡದವರನ್ನು ಕಛೇರಿಯ ಒಳಗೆ ಒಂದು ಸುತ್ತು ತಮ್ಮ ಕಲೆಯನ್ನು ಪ್ರದರ್ಶಿಸುತ್ತಾ ಬಂದರು. ಡೊಳ್ಳಿನ ಸದ್ದಿಗೆ ಇಡೀ ಕಛೇರಿಯ ಜನ ರೋಮಾಂಚನಗೊಂಡರು. ಅವರು ನಿರ್ಮಿಸಿದ ಮಾನವ ಪಿರಮಿಡ್ ಮಾದರಿಯಲ್ಲಿ ಡೊಳ್ಳು ಬಾರಿಸುವುದನ್ನು ಕಂಡ ನಮ್ಮ ಪ್ಯಾಟೆ ಮಂದಿ ಆಶರ್ಯ ಚಕಿತರಾದರು. ಇನ್ನು ವೀರಭದ್ರ ಕುಣಿತವನ್ನು ಕಂಡ ಜನ ಊಟವನ್ನು ಮರೆತು ಅವರ ಕಲೆಯನ್ನು ಸವಿಯುತ್ತ ನಿಂತರು.

ವೀರಭದ್ರ ಕುಣಿತದವರ ಮುಖಭಾವವನ್ನು ವರ್ಣಿಸಲು ಪದಗಳು ಸಿಗೋದಿಲ್ಲಾ..ಅದೇನಿದ್ರು ನೋಡಿ ಸವಿಯೋದೆ ಚೆಂದ. ಇದೆಲ್ಲಾ ಆಗುತ್ತಿರಬೇಕಾದ್ರೆ.. ಅಲ್ಲಿ ಇನ್ನೊಂದು ಕಡೆ ಕರಗದ ಉತ್ಸವ ಶುರುವಾಯಿತು. ಈ ಸಲದ ರಾಜ್ಯೋತ್ಸವದ ಥೀಮ್ "ಬೆಂಗಳೂರು ದರ್ಶನ" ವಾಗಿದ್ದ ರಿಂದ, ಕರಗದ ಜೊತೆ ಕೆಂಪೇಗೌಡರ ವೇಷಧಾರಿಯೊಬ್ಬರು ಸಭಾಂಗಣದ ಒಳಗೆ ನಡೆದು ಬಂದರು. ಕರಗಕ್ಕೆ ಡೊಳ್ಳು ಕುಣಿತ ಹಾಗು ವೀರಭದ್ರ ಕುಣಿತದವರಿಂದ ಸ್ವಾಗತ ಸಿಕ್ಕಿತು.

ನಂತರ ಕರಗಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮವನ್ನು ಸರಿಯಾಗಿ ೨:೪೫ ಗೆ ಶುರುಮಡಿದೆವು. ಶಿವು ಹಾಗು ಶ್ರೀಲಕ್ಷ್ಮಿ ಯವರ ಆತಿಥ್ಯದಲಿ ಕಾರ್ಯಕ್ರಮ ಗಣಪನ ಆರಾಧನೆಯೊಂದಿಗೆ ಶುರುವಾಯಿತು. ಈ ಸಲ ಗಣಪನ ಪೂಜೆ ನೃತ್ಯರೂಪದಲ್ಲಿ ಪ್ರಸ್ತುತ ಪಡಿಸಿದ್ದು ನಮ್ಮವರೇ ಆದ ಸಿಂಧುರವರು.

ಅಷ್ಟರಲ್ಲಿ ನಮ್ಮ ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀ ಯೋಗರಾಜ ಭಟ್ ಅವರು ಆಗಮಿಸಿದರು. ಭಾರಿ ಚಪ್ಪಾಳೆಯೊಂದಿಗೆ ಅವರನ್ನು ಸಭೆಯಲ್ಲಿ ನೆರೆದಿದ್ದ ಜನರು ಸ್ವಾಗತಿಸಿದರು. ಅವರ ಜೊತೆ ನಮ್ಮವರೆ ಆದ ಶ್ರೀ. ಕೆ.ಕೆ. ಲಕ್ಷ್ಮೀಪ್ರಸಾದ್ ಮತ್ತು ಶ್ರೀ ಭುವನೇಶ್ವರ ನಾಯಕ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಮಯದಲ್ಲಿ ಶ್ರಿನಿ ಮತ್ತು ತಂಡದವರು "ಹಚ್ಚೇವು ಕನ್ನಡದ ದೀಪ" ಹಾಡನ್ನು ಹಾಡಿದರು.

ಈ ವರ್ಷ ಗತಿಸಿದ ಕರ್ನಾಟಕದ ಮೇರು ವ್ಯಕ್ತಿಗಳಿಗೆ ಹಾಡಿನ ಮೂಲಕ ಶ್ರಧ್ಧಾಂಜಲಿಯನ್ನು ಅರ್ಪಿಸಲಾಯಿತು. ನಂತರ ಶ್ರೀ. ಯೋಗರಾಜ್ ಭಟ್ ಅವರು ಈ ಟೆಕ್ಕಿ ಯುಗದಲ್ಲಿ ಸಂಬಂಧಗಳ ಕುರಿತು ಮಾತನ್ನಾಡಿದರು. ತಮಾಷೆಯಾಗೆ ಇದ್ದ ಅವರ ಮಾತುಗಳು, ಮುಗಿಯುವ ಅಂತಕ್ಕೆ ಬಂದಾಗ ನಮ್ಮಲ್ಲಿ ಗಂಭೀರವಾದ ಆಲೋಚನೆಯನ್ನುಂಟು ಮಾಡಿತು.

ಸಭಿಕರ "ಒಂದು ಹಾಡು" ಎಂಬ ಒತ್ತಾಯಕ್ಕೆ ಮಣಿಯದ ಅವರು ತಮ್ಮ ಪಂಚರಂಗಿ ಸಿನಿಮಾದ "ಗಳು" ಡೈಲಾಗ್ ಅನ್ನು ನಮ್ಮ ಸಾಫ್ಟವೇರ್ ಉದ್ಯಮಕ್ಕೆ ಸರಿಯಾಗಿ ಬದಲಾಯಿಸಿ ಹೇಳಿ ಪ್ರೇಕ್ಷಕರಿಂದ ಭರ್ಜರಿ ಚಪ್ಪಾಳೆ ಗಿಟ್ಟಿಸಿಕೊಂಡರು. ನಂತರ ಕನ್ನಡ ಚಲನಚಿತ್ರಗಳ ಕೆಲವು ಗೀತೆಗಳನ್ನು ಹಾಡಲಾಯಿತು. ಹರ್ಷ ಮತ್ತು ತಂಡದವರಿಂದ "ಬೆಂಗಳೂರು ೨೨೫೦" ಎಂಬ ನಾಟಕ ನೆರದಿದ್ದ ಸಭಿಕರಿಗೆ ಮನೋರಂಜನೆ ಜೊತೆಗೆ ಕನ್ನಡಿಗರ ಕರ್ತವ್ಯವನ್ನು ನೆನಪಿಸಿತು.

ನಂತರ ವಿಠ್ಠಲ್ ಮತ್ತು ತಂಡದವರಿಂದ "ತಗಡಾನಿಕ್" ಎಂಬ ಟೈಟಾನಿಕ್ ಚಲನಚಿತ್ರದ ಸ್ಪೂಫ್ ಎಲ್ಲರನ್ನು ನಗೆಗಡಲಲ್ಲಿ ಮುಳುಗಿಸಿತು. ನಂತರ ಕೌಶಿಕ್ ಮತ್ತು ತಂಡದವರಿಂದ "ಮಠ" ಎಂಬ ಮ್ಯಾಡ್ ಆಡ್ಸ್ ಪ್ರೇಕ್ಷಕರನ್ನು ಹುಚ್ಚೆಬಿಸಿತು."ಬೆಂಗಳೂರು ರ್ಶನ" ಫ್ಯಾಶನ್ ಷೋ ದಲ್ಲಿ ಮೊದಲಿಗೆ ಬಂದಿದ್ದು ನಾಡ ಪ್ರಭು ಕೆಂಪೇಗೌಡ.

ನಂತರ ಬೆಂಗಳೂರಿನ ದೇವಸ್ಥಾನಗಳ ಪರಿಚಯ, ಬೆಂಗಳೂರಿನ ಫುಡ್ ಸ್ಟ್ರೀಟ್ ಪರಿಚಯ, ಚಿತ್ರ ಸಂತೆ, ಕ.ರ.ವೇ, ಕಿಂಗ್ ಫಿಷರ್/ ಆರ್.ಸಿ.ಬಿ, ಬೆಂಗಳೂರಿನ ನೈಟ್ ಲೈಫ್ ಬಗ್ಗೆ ಪರಿಚಯಿಸಲಾಯಿತು.ತದನಂತರ ಚಿರಂಜೀವಿ ಮತ್ತು ತಂಡದವರಿಂದ ನೃತ್ಯ ಪ್ರದರ್ಶನ ನಡೆಯಿತು. ಇದರೊಂದಿಗೆ ಈ ಸಲದ ರಾಜ್ಯೋತ್ಸವದ ಕಾರ್ಯಕ್ರಮ ಮುಕ್ತಾಯವಾಯಿತು.

Monday, March 1, 2010

ವಿಪ್ರೋದಲ್ಲಿ ಕನ್ನಡ ನಾಡಹಬ್ಬ 2009

ಕನ್ನಡ ಎನೆ ಕುಣಿದಾಡುವುದೆನ್ನೆದೆ,
ಕನ್ನಡ ಎನೆ ಕಿವಿ ನಿಮುರುವುದು…..
ಎಂಬ ಕವಿವಾಣಿಯಂತೆ ನಿಜವಾದ ಸ್ವಾಭಿಮಾನಿ ಕನ್ನಡಿಗರಿಗೆ ಕನ್ನಡ ಎಂಬ ಪದ ಕಿವಿಗೆ ಬಿದ್ದೊಡನೆಯೇ ರೋಮಂಚನವಾಗುವುದು.

ಎಲ್ಲಾದರೂ ಇರು ಎಂತಾದರೂ ಇರು
ಎಂದೆಂದಿಗೂ ನೀ ಕನ್ನಡವಾಗಿರು….
ಎಂಬುದು ಕವಿಯ ಕಂಪುನುಡಿ


ಅದರಂತೆಯೇ ವಿಪ್ರೊ ಸಂಸ್ಥೆಯಲ್ಲಿ ಕನ್ನಡದ ಕಂಪು ಪಸರಿಸುವ  ಕಾರ್ಯ ಕೆಚ್ಚಿನ ಕನ್ನಡಿಗರಿಂದಾಗುತ್ತಿದೆ. ವಿಪ್ರೋದಲ್ಲಿ ಸದ್ದಿಲ್ಲದೇ ವರ್ಷಕ್ಕೊಮ್ಮೆ ವಿಸ್ಮಯ ಎಂಬ ಹೆಸರ ಮೂಲಕ ಕನ್ನಡ ಜಾತ್ರೆ ನಡೆಯುತ್ತಿದೆ, ಕನ್ನಡ ಬಾವುಟಗಳು ಹಾರಾಡುತ್ತವೆ, ಸಾಹಿತ್ಯ ಮತ್ತು ಸಂಸ್ಕೃತಿಯ ಸಿಂಚನವಾಗುತ್ತದೆ.  ಕಳೆದ ನಾಲ್ಕು ವರ್ಷಗಳಿಂದಲೂ ಸದ್ದಿಲ್ಲದೇ ಮತ್ತು ಸುದ್ದಿಯಾಗದ ಕನ್ನಡ ರಥ ವಿಪ್ರೋದಲ್ಲಿ ವಿಜ್ರಂಭಿಸುತ್ತ ಬಂದಿದೆ.

ಈ ಕನ್ನಡ ರಥದ ಸೂತ್ರಧಾರಿ ನರಸಿಂಗ ರಾವ್. ಇನ್ನು ಇವರಿಗೆ ವಿಸ್ಮಯದ ರೂವಾರಿಯಾಗಿ ರಾಘವೇಂದ್ರ ಕಮಲಾಕರ್ ಸಾಥ್ ನೀಡಿದ್ದಾರೆ . ಇವರಿಬ್ಬರಿಗೂ ಜೈ ಅನ್ನುತ್ತಲೇ ಕನ್ನಡ ಭಾಷಾಭಿಮಾನವನ್ನು ಎತ್ತಿ ತೋರಿಸಲು ಸಮಾನ ಮನಸ್ಸಿನ ಗೆಳೆಯರಿದ್ದಾರೆ. 

  
ಫೆಬ್ರವರಿ 11 ರಂದು ನಡೆದ ವಿಸ್ಮಯ ಕಾರ್ಯಕ್ರಮವು ಆಪ್ತರ, ಸಮಾನಮನಸ್ಕರ, ಅಪ್ಪಟ ಕನ್ನಡಾಭಿಮಾನಿಗಳ ವೇದಿಕೆಯಾಗಿತ್ತೆನ್ನಬಹುದು. ಈ ಬಾರಿ ನಡೆದ ವಿಸ್ಮಯ ಮಾತ್ರ ಎಲ್ಲರನ್ನೂ ಮೂಕವಿಸ್ಮಿತರನ್ನಾಗಿಸಿದ್ದು ಸುಳ್ಳಲ್ಲ. ಇಂತಹ ಅಪರೂಪದ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದು ಸಾವಿರಾರು ವಿಪ್ರೊ ಕನ್ನಡಿಗರು - ಅಷ್ಟೊಂದು ಕನ್ನಡಿಗರು ವಿಪ್ರೋದಲ್ಲಿದ್ದಾರೆಯೇ ಎಂದು ಅಚ್ಚರಿಯಾಗಬಹುದು.

ಕಳೆದ ಫೆಬ್ರವರಿ 11ರಂದು ನಡೆದ ವಿಸ್ಮಯಕ್ಕೆ ಬರೋಬ್ಬರಿ ಐದು ಸಾವಿರಕ್ಕೂ ಹೆಚ್ಚು ಕನ್ನಡಿಗರು ಸೇರಿದ್ದು ವಿಶೇಷ ಮತ್ತು ವಿಸ್ಮಯ! ಹಾಗಾದರೆ, ಅಷ್ಟೊಂದು ಜನರ ಮುಂದೆ ವಿಸ್ಮಯದ ಅವತಾರವಾದರೂ ಹೇಗಿತ್ತು ಎಂಬ ಕುತೂಹಲವಿದ್ದರೆ ಅಲ್ಲಿನ ವರ್ಣನೆಯನ್ನೊಮ್ಮೆ ಓದಲೇಬೇಕು.

ಅದು ವಿಪ್ರೊ ಆವರಣದ ಕುವೆಂಪು ರಂಗಮಂಚ. ಸಿಂಪಲ್ ವೇದಿಕೆ ಮೇಲೆ ಹಾಗು ಮುಂದೆ ಕನ್ನಡ ಬಾವುಟಗಳದ್ದೇ ಕಾರುಬಾರು. ಇಡೀ 'Amphi theater' ಅನ್ನು ಒಂದು ನವ ವಧುವಿನಂತೆ ಸಿಂಗರಿಸಲಾಗಿದ್ದು, ಒಂದು ಗಂಧರ್ವ ಲೋಕವಾಗಿ ಮಾರ್ಪಟ್ಟಿತ್ತು. ಕಣ್ಣು   ಹಾಯಿಸಿದ   ಕಡೆಯೆಲ್ಲಾ   ವಿಪ್ರೊ  ಕನ್ನಡಿಗರ  ಗುಂಪು. ಇದರೊಂದಿಗೆ  ಸೇರಿದ್ದ  ಸಾವಿರಾರು ಅನ್ಯಭಾಶಿಕರಲ್ಲೂ  ಕನ್ನಡ  ಪ್ರೇಮವಿತ್ತು  ಎಂಬುದಕ್ಕೆ ಅವರ ಕೊರಳಲ್ಲಿದ್ದ ಕೆಂಪು ಹಳದಿ ಬಣ್ಣದ ವಸ್ತ್ರವೇ ಸಾಕ್ಷಿ.

ಆಗಷ್ಟೇ ಕೆಂಪು ಸೂರ್ಯ ತಣ್ಣಗಾಗುತ್ತಿದ್ದ. ಇತ್ತ ತಿಳಿ ತಂಗಾಳಿ ತೀಡುತ್ತಿತ್ತು. ಅತ್ತ amphi theater ಶಿಳ್ಳೆ, ಕೇಕೆ ಹಾಗು ಚಪ್ಪಾಳೆಗಳಿಂದ ಕಳೆಗಟ್ಟಿತ್ತು . ಎತ್ತ ನೋಡಿದರೂ ಕಿಕ್ಕಿರಿದು ತುಂಬಿದ್ದ ಜನಸ್ತೋಮ …. ಕನ್ನಡ ಕನ್ನಡ ಬನ್ನಿ ನಮ್ಮ ಸಂಗಡ ಎಂಬ ಸಂದೇಶ ಹೊತ್ತಿದ್ದ ವಿಸ್ಮಯ ಟಿ-ಶರ್ಟ್ ಧರಿಸಿ ಕಾರ್ಯಕ್ರಮಕ್ಕೆ ಕಹಳೆ ತಂದಿದ್ದ ವಿಪ್ರೊ ಕನ್ನಡಿಗರು ….

ನಿಜಕ್ಕೂ ಅದೊಂದು ಅಪ್ಪಟ ಕನ್ನಡ ಹಬ್ಬ. ಬಹಳಷ್ಟು ಜನ ವಿಶೇಷವಾದ ಸಾಂಸ್ಕೃತಿಕ ಉಡುಗೆ-ತೊಡುಗೆಗಳಲ್ಲಿ ವಿಜೃಂಭಿಸಿ ಬಣ್ಣದ ಲೋಕವನ್ನು ತೆರೆದಿಟ್ಟಿದ್ದರು. ಇಂಥದ್ದೊಂದು ಕಲರ್ಫುಲ್ ಕನ್ನಡ ಕಾರ್ಯಕ್ರಮ ನಡೆಸಲು ಕೇವಲ ವಿಪ್ರೊ ಕನ್ನಡಿಗರಿಂದ ಮಾತ್ರ ಸಾಧ್ಯ ಎಂಬುದು ಅಲ್ಲಿ ಸಾಬೀತಾಯಿತು.


ಸಂಸ್ಥೆಯ ಹಿರಿಯರಾದ ಸಿ.ಪಿ . ಗಂಗಾಧರಯ್ಯ , ವಿ . ಆರ್ . ವೆಂಕಟೇಶ್ ಅವರೊಂದಿಗೆ ಈ ಬಾರಿ ವಿಸ್ಮಯ ವೇದಿಕೆಯನ್ನು ಹಂಚಿಕೊಳ್ಳಲು ಆಗಮಿಸಿದ್ದ ಹಿರಿಯ ಪತ್ರಕರ್ತ ರವಿ ಬೆಳಗೆರೆ ಅಂದು ಮುಖ್ಯ ಅತಿಥಿ. ಅಂದು ಸೇರಿದ್ದ ಜನಸ್ತೋಮ ಕಂಡ ಗಂಗಾಧರಯ್ಯ ಫುಲ್ ಖುಷ್. Amphi theaterನಲ್ಲಿ ಒಂದೇ ಬಾರಿಗೆ ಅಷ್ಟೊಂದು ಕನ್ನಡಿಗರನ್ನು ಕಂಡ ವೆಂಕಟೇಶ್ ಅವರಂತೂ ಇನ್ನೂ ಖುಷ್. ಈ ವೇಳೆ ಪತ್ರಕರ್ತ ರವಿ ಬೆಳಗೆರೆ ಅವರ ಮಾತಿಗೊಂದಿಷ್ಟು ಎಲ್ಲರೂ ಕಿವಿಯಾದರು. ಅವರು ಹರಿಬಿಟ್ಟ ಪುನ್ಚಿಂಗ್ ಡೈಲಾಗ್ ಗಳಿಗೆ ನೆರೆದಿದ್ದವರೆಲ್ಲಾ ಜೋಶ್ ನಲ್ಲೆ ಚಪ್ಪಾಳೆ ತಟ್ಟಿದರು…

ಖುಷಿಯ ಅಲೆಯಲ್ಲಿ ತೇಲುತ್ತಿದ್ದ ವಿಪ್ರೊ ಕನ್ನಡಿಗರಿಗೆ ಅಚ್ಚರಿಯೊಂದು ಕಾದಿತ್ತು. ವಿಸ್ಮಯ ವೇದಿಕೆ ಮೇಲೆ ಒಮ್ಮೆಲೇ ಎಂಟ್ರಿ ಕೊಟ್ಟ ಕಿಚ್ಚ ಸುದೀಪ್ ಎಲ್ಲರ ಕಡೆಯೂ ಕೈ ಬೀಸಿದರು. ಸುದೀಪ್ ಕಾಣಿಸಿಕೊಂಡಿದ್ದೆ ತಡ, ಸಾವಿರಾರು ಮಂದಿಯ ಖುಷಿಗೆ ಪಾರವೇ ಇರಲಿಲ್ಲ. ಆ ಕ್ಷಣ ಶಿಳ್ಳೆ, ಕೇಕೆಗಳ ಅಬ್ಬರ ಮುಗಿಲು ಮುಟ್ಟಿತ್ತು

ರಘು ದೀಕ್ಷಿತ್ ಮತ್ತು ಸುದೀಪ್ ಅಂದಿನ ವಿಸ್ಮಯದ highlight. ಜಸ್ಟ್ ಮಾತಿಗಿಳಿದ ಸುದೀಪ್ ವಿಪ್ರೊ ಕುರಿತು ಮೆಚ್ಚುಗೆಪಟ್ಟರು. ವಿಸ್ಮಯದ ಕುರಿತು ಹಾಡಿ ಹೊಗಳಿದರು. ಅದೂ ಸಾಲದೆಂಬಂತೆ ವೇದಿಕೆ ಮೇಲೆ ರಘು ದೀಕ್ಷಿತ್ ಜತೆ ಹಾಡುವ ಮೂಲಕ ರಂಜಿಸಿ ಹಾಗೆಯೇ ಮರೆಯಾದರು. ಮೈಸೂರ್ ಆನಂದ್ ರವರ ವಿಚಿತ್ರ ಹಾವ ಭಾವದಿಂದ ಕೂಡಿದ ನಗೆ ಹನಿಗಳ ಮೂಲಕ ಜನರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದರು.

ಇದೆಲ್ಲದರ ನಡುವೆ ಜೂನಿಯರ್ ವಿಷ್ಣುವರ್ಧನ್ - ವಿಸ್ಮಯಕ್ಕಾಗೆ ಕನ್ನಡದ ಮೇರು ನಟ ವಿಷ್ಣುವರ್ಧನ್ ಮತ್ತೆ ಧರೆಗಿಳಿದು ಬಂದಂತಿತ್ತು. ಹಾಡು, ಹಾಸ್ಯ ಮತ್ತು ನೃತ್ಯದಿಂದ ತುಂಬಿದ ಈ ಕಾರ್ಯಕ್ರಮವನ್ನು 5000ಕ್ಕು ಹೆಚ್ಚು ಜನ ನೋಡಿ ಆನಂದಿಸಿದರು. ಒಟ್ಟಿನಲ್ಲಿ ಅಂದಿನ ಪ್ರತಿಯೊಂದು ಕಾರ್ಯಕ್ರಮ ಅಚ್ಚುಕಟ್ಟುತನ, ಸಮಯಪ್ರಜ್ಞೆ, ಕಾರ್ಯದಕ್ಷತೆ, ಪ್ರತಿಭೆ, ಆತ್ಮೀಯತೆ ಮತ್ತು ಎಲ್ಲಕ್ಕೂ ಮಿಗಿಲಾಗಿ ಕನ್ನಡ ಪ್ರೇಮದಲ್ಲಿ ಮೆದ್ದು ಜನರ ಮನದಲ್ಲಿ ಅಚ್ಚಳಿಯದಂತೆ ಮಾಡಿತು. IT ಹುಡುಗರಲ್ಲೂ ಸಾಹಿತ್ಯದ ಅಭಿರುಚಿ ಇದೆ ಅನ್ನೋದನ್ನ ತೋರಿಸಿಕೊಟ್ಟದ್ದು ಮಲ್ಲಿಗೆ ಎಂಬ ಕನ್ನಡದ ಆಡಿಯೋ ಆಲ್ಬಮ್.

ವಿಪ್ರೋದ ಶ್ರೀಕಾಂತ್ ಚೂಡಾನಾಥ್ ಅವರ ಸಾಹಿತ್ಯದಲ್ಲಿ ಮೂಡಿಬಂದ ಮಲ್ಲಿಗೆ ಆಲ್ಬಮ್ ಅಂದು ಕಿಚ್ಚ ಸುದೀಪ್ ಕೈಯಿಂದ ಬಿಡುಗಡೆಯಾಗಿದ್ದು ಮತ್ತೊಂದು ಸ್ಪೆಷಲ್. 

ಒಟ್ಟಿನಲ್ಲಿ ಬೇರೆ ಬೇರೆ ಕಂಪನಿಗಳಲ್ಲಿರುವ ಕನ್ನಡದ ಅಣ್ಣ-ತಮ್ಮಂದಿರಲ್ಲೂ ತಮ್ಮ ತಮ್ಮ ಸಂಸ್ಥೆಗಳಲ್ಲಿ ಕನ್ನಡ ನಾಡಹಬ್ಬ ಮಾಡಬೇಕೆಂಬ ಉತ್ಸಾಹ ತುಂಬುವುದರಲ್ಲಿ ಯಶಸ್ವಿಯಾಯಿತು ಎಂದರೆ ತಪ್ಪಾಗಲಾರದು.

Wednesday, December 23, 2009

ಆರೆಕಲ್ ನಲ್ಲಿ ನಡೆದ ಕನ್ನಡ ನಾಡ ಹಬ್ಬ 2009

ನಿತ್ಯೋತ್ಸವ ತಾಯೇ ನಿನಗೆ ನಿತ್ಯೋತ್ಸವದ ಖ್ಯಾತ ಕವಿ ಡಾI. ಕೆ. ಎಸ್. ನಿಸ್ಸಾರ್ ಅಹಮದ್ ವಾಣಿಯಂತೆ ಡಿಸೆಂಬರ್ ೩, ೨೦೦೯ ರಂದು ಆರೆಕಲ್ ಲೆಕ್ಸಿಂಗ್ಟನ್ ಟವರ್ ಬೆಂಗಳೂರಿನಲ್ಲಿ ಎರಡನೇ ವರುಷವೂ ಕರ್ನಾಟಕ ರಾಜ್ಯೋತ್ಸವ ಅದ್ದೂರಿ ಯಶಸ್ಸು ಕಂಡಿತು. ಆರೆಕಲ್ ನಂತಹ ಬಹುರಾಷ್ಟ್ರೀಯ ಕಂಪನಿಗೆ ಕರ್ನಾಟಕದ ಜನಪದ ಕಲೆ ಸಂಸ್ಕೃತಿಯ ಪರಿಚಯ ಈ ವರುಷದ ಧ್ಯೇಯವಾಗಿತ್ತು. ಸಮಯದ ಅಭಾವದ ಕಾರಣ ಕೇವಲ ೨ ಗಂಟೆಗಳ ಕಾಲ ರಸಸಂಜೆ ಆಯೋಜಿಸಲಾಗಿತ್ತು.

ಹಚ್ಚೇವು ಕನ್ನಡದ ದೀಪ ಹಾಡಿನೊಂದಿಗೆ ದೀಪ ಬೆಳಗಿಸಿ ಉದ್ಘಾಟಿಸಲಾಯಿತು. ಕಾರ್ಯಕ್ರಮದ ಆರಂಭದಲ್ಲಿ ಶ್ರೀ. ರವಿಶಂಕರ್ ಅವರ ಕೊಳಲುವಾದನ ಕನ್ನಡ ಆರಾಧನೆಗೆ ಕನ್ನಡಿ ಹಿಡಿದಂತಿತ್ತು. ಕನ್ನಡದ ರವಿ ಮೂಡಿಬಂದ ಸಮೂಹಗಾಯನ ಆ ಸಂಜೆಗೆ ರಂಗೇರಿಸಿತ್ತು.

ಮಂಥರೆಯ ದುರ್ಮಂತ್ರ, ಆ ಸಂಜೆಯ ರಸದೌತಣಕ್ಕಾಗೆ ಆಯೋಜಿಸಿದ್ದ ಯಕ್ಷಗಾನ, ಸುಮಾರು ೨೦೦ ರಸಿಕರನ್ನು; ತಮ್ಮ ಕೆಲಸಗಳ ಒತ್ತಡಗಳನ್ನು ಬದಿಗೊತ್ತಿ ಗಂಧರ್ವಲೋಕದಲ್ಲಿ ತೆಲಾಡುವಂತೆ ಮಾಡಿತು.
ಮಂಥರೆಯ ದುರ್ಮಂತ್ರ ರಾಮಾಯಣದಲ್ಲಿ ಮಂಥರೆಯು ಭರತನ ತಾಯಿ ಕೈಕೇಯಿಗೆ  ಚಾಡಿ ಹೇಳುವ ಪ್ರಸಂಗ. ಸರ್ವಶ್ರೀ ಮಂಟಪ ಉಪಾದ್ಯಾಯರ ಕೈಕೇಯಿ ಸ್ತ್ರೀ ವೇಷದ ಅಂದ ಚೆಂದ, ವಯ್ಯಾರದ ನಡಿಗೆ, ಹಾವ ಭಾವ ನೋಡಿ ನೆರೆದಿದ್ದ ಮಹಿಳೆಯರು ಅಸೂಯೆಪಟ್ಟು; ಉಪಾಧ್ಯಾಯರು ನಿಜವಾಗಿ ಸ್ತ್ರೀಯಲ್ಲವೆಂದು ಸಮಾಧಾನವಾದರು. ದುರ್ಮಂತ್ರ ಹೇಳಲು ಬಂದ ಯಕ್ಷಲೋಕದ ಹಾಸ್ಯ ಕಲಾವಿದರಾದ ಶ್ರೀ. ಚಪ್ಪರ್ಮನೆ ಶ್ರೀಧರ ಹೆಗ್ಡೆ ಮಂಥರೆಯಾಗಿ ಮಿಂಚಿದರು. ಅವರ ಕಲಾ ಫ್ರೌಡಿಮೆ, ಅಭಿನಯದಲ್ಲಿ ತೋರಿದ ಹಲವು ಮಜಲು, ಮುಖಭಾವ, ಹಣ್ಣು ಹಣ್ಣು ಮುದುಕಿ ಕುರೂಪಿ ಮಂಥರೆಯ ನಡೆ ಭಂಗಿ, ಕನ್ನಡ ಗಂಧವೇ ಇಲ್ಲದ ವೀಕ್ಷಕರ ಮಂತ್ರಮುಗ್ದತೆಯೇ ತುಲನೆಗೆ ಅಸಾದ್ಯವೆಂದು ಸಾರಿಹೇಳಿತ್ತು. ಸುಮಾರು ೫೦೦ - ೬೦೦ ವರುಷ ಪರಂಪರೆ ಇರುವ ಯಕ್ಷಗಾನ ಪ್ರದರ್ಶನ, ವಿವಿಧ ಭಾಷೆ, ಸಂಸ್ಕೃತಿ;  ಸಭೀಕರ ಮೆಚ್ಚುಗೆಯ ಕರತಾಡನವೇ ಕಾರ್ಯಕ್ರಮದ ಯಶಸ್ಸಿಗೆ ಮುದ್ರೆಯೋತ್ತಿದಂತಿತ್ತು.


ಚಿತ್ರಗಳು: 











ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.

Sunday, December 6, 2009

ಇನ್ ಫೋಸಿಸ್ ಬೆಂಗಳೂರಿನಲ್ಲಿ ನಡೆದ ಕನ್ನಡ ನಾಡ ಹಬ್ಬ 2009

ಇನ್ಫೋಸಿಸ್ ಬೆಂಗಳೂರಿನಲ್ಲಿ ನವೆಂಬರ್ ೧೨ ರಂದು ಕನ್ನಡ ನಾಡ ಹಬ್ಬ ನಡೆಯಿತು. ಕನ್ನಡ ಚಿತ್ರರಂಗದ ಸುವರ್ಣ ಮಹೋತ್ಸವವನ್ನು ಥೀಮ್ ಆಗಿ ಇಟ್ಟುಕೊಂಡು ನೆಡಸಿದ ಕಾರ್ಯಕ್ರಮದಲ್ಲಿ ೧೯೩೪ ರಿಂದ ಹಿಡಿದು ೨೦೦೯ ರ ವರೆಗಿನ ಎಲ್ಲ ಚಿತ್ರ ರಂಗದ ವಿಚಾರಗಳನ್ನೂ ತಿಳಿಸಲಾಯಿತು. ಹಾಡು, ಹಾಸ್ಯ ಮತ್ತು ನೃತ್ಯದಿಂದ ತುಂಬಿದ ಈ ಕಾರ್ಯಕ್ರಮವನ್ನು ೧೫೦೦ಕ್ಕು ಹೆಚ್ಚು ಜನ ನೋಡಿ ಆನಂದಿಸಿದರು.ಇನ್ಫೋಸಿಸ್ ನಲ್ಲಿ ಐದು ವರ್ಷಗಳಿಂದ ಸತತವಾಗಿ ನಡೆಯುತ್ತಿರುವ ಕನ್ನಡ ಕಲಿಯ ಬಗ್ಗೆ ಇದರಲ್ಲಿ ಮಾತನಾಡಿ ನಮ್ಮ ಕನ್ನಡ ಮೇಷ್ಟ್ರಿಗೆ ಸನ್ಮಾನಿಸಲಾಯಿತು.



ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.

Thursday, December 3, 2009

ಹನಿವೆಲ್ ನಲ್ಲಿ ನಡೆದ ಕನ್ನಡ ನಾಡಹಬ್ಬ 2009

ನವೆಂಬರ್ ೨೬ ರಂದು ಅದ್ಧೂರಿಯಾಗಿ ಹನಿವೆಲ್ ಸಂಸ್ಥೆಯಲ್ಲಿ ರಾಜ್ಯೋತ್ಸವವನ್ನು ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಇತ್ತೀಚಿಗಷ್ಟೇ ಶಿವಾಧೀನರಾದ ಗಾನ ಗಂಗೆ ಗಂಗೂ ಭಾಯಿ ಹಾನಗಲ್ ಅವರಿಗೆ ಭಾವ ಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ಚುಟುಕು, ಪದಬಂಧದಂತಹ ಹಲವು ಸ್ಪರ್ಧೆಗಳನ್ನು ಈ  ಸಂಧರ್ಭದಲ್ಲಿ ಏರ್ಪಡಿಸಲಾಗಿತ್ತು.  ಖ್ಯಾತ ಸಾಹಿತಿ ಲಕ್ಷ್ಮೀನಾರಾಯಣ ಭಟ್ಟರು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು.

ಕಾರ್ಯಕ್ರಮದ ಚಿತ್ರಗಳು:









































































ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.

ಮ್ಯಾನ್ ಹಟ್ಟನ್ ಅಸೋಸಿಯೇಟ್ಸ್ ಅಲ್ಲಿ "ಸೆಲೆಬ್ರೇಟ್ ನಮ್ಮ ಬೆಂಗಳೂರು"

ಮ್ಯಾನ್ ಹಾಟನ್ ಅಸೋಸಿಯೇಟ್ಸ್ ಕಂಪನಿಯಲ್ಲಿ ರಾಜ್ಯೋತ್ಸವದ ಪ್ರಯುಕ್ತ "ಸೆಲೆಬ್ರೇಟ್ ನಮ್ಮ ಬೆಂಗಳೂರು " ಅನ್ನುವ ವಿಶೇಷ ದಿನ ಆಚರಿಸಲಾಯಿತು. ಕರ್ನಾಟಕದ ವಿಶೇಷ ಅಡುಗೆ ಅಂದಿನ ವಿಶೇಷವಾಗಿತ್ತು. ಸತೀಶ್ ಗೋವಿಂದನ್ ಅವರ ಕರೋವಾಕೆ, ಬೆಂಗಳೂರಿನ ಬಗ್ಗೆ ರಸ ಪ್ರಶ್ನೆ, ಬೆಂಗಳೂರು-ಕರ್ನಾಟಕದ ಬಗ್ಗೆ ವಿಶೇಷ ಪ್ರಾತ್ಯಕ್ಷಿತೆ ಅಂದಿನ ವಿಶೇಷವಾಗಿತ್ತು.

ಕಾರ್ಯಕ್ರಮದ ಪಟ್ಟಿಯ ಚಿತ್ರ ಇಂತಿದೆ:
























ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.

Wednesday, December 2, 2009

ಮೈಂಡ್ ಟೆಕ್ ನಲ್ಲಿ ನಡೆದ ಕನ್ನಡ ನಾಡ ಹಬ್ಬ 2009

ಮೈಂಡ್ ಟೆಕ್ ನಲ್ಲಿ  ಪ್ರತಿ  ವರ್ಷವೂ  ಆಚರಿಸುವಂತೆ  ಈ  ವರ್ಷವೂ  ಕನ್ನಡ  ರಾಜ್ಯೋತ್ಸವವನ್ನು  ನವೆಂಬರ್  6 ರಂದು  ಆಚರಿಸಲಾಯಿತು . ಉತ್ತರ  ಕರ್ನಾಟಕದಲ್ಲಿ  ನೆರೆ  ಹಾವಳಿಯಲ್ಲಿ  ಜನರು  ಸಂಕಷ್ಟಕ್ಕೆ  ಒಳಗಾದ  ಕಾರಣ  ಈ  ಸಲ  ಆಚರಣೆ  ಸರಳವಾಗಿತ್ತು. ಇದು  4 ನೇ  ವರ್ಷದ  ಆಚರಣೆ.













1. ಬೆಳಿಗ್ಗೆ 10:00 ಗಂಟೆಗೆ ಎಲ್ಲರು ಆಚರಣೆಗೆ ಸೇರಿದೆವು .
2. ಕಂಪನಿಯ ಗಣ್ಯರು ಆಗಮಿಸಿದರು. ಅವರಿಂದ ದೀಪ ಬೆಳಗಿಸಿದೆವು .
3. ಹಚ್ಚೇವು ಕನ್ನಡದ ದೀಪ ಹಾಡನ್ನು ಹಾಡಿದೆವು .
4. ಕಾರ್ಯಕ್ರಮ ನಿರೂಪಣೆ ಜವಾಬ್ದಾರಿಯನ್ನು ವಿನಯ್  ಮಠರವರು ವಹಿಸಿಕೊಂಡು ಚೆನ್ನಾಗಿ ನಡೆಸಿಕೊಟ್ಟರು .
5. ನಂತರ  ನಾಡಗೀತೆ  - ಜಯ  ಭಾರತ  ಜನನಿಯ  ತನುಜಾತೆ  ಜಯಹೇ  ಕರ್ನಾಟಕ  ಮಾತೆ ಹಾಡಲಾಯಿತು .
6. ಕನ್ನಡ ನಾಡು, ನುಡಿ ಹಾಗೂ ಜನರ ಬಗ್ಗೆ ವಿನಯ್ ಮಾತನಾಡಿದರು .
7. ಗಣ್ಯರು ಕೂಡ ಕನ್ನಡದ  ಬಗ್ಗೆ  ಅವರಿಗಿರುವ ಅಭಿಪ್ರಾಯವನ್ನು ಹೇಳಿದರು.
8. ಪ್ರತಿ ವರ್ಷ ಆಚರಣೆಯ ಸಂದರ್ಭದಲ್ಲಿ ಕರ್ನಾಟಕದ ವಿವಿಧ ಭಾಗಗಳ  ಸಿಹಿ ತಿಂಡಿಯನ್ನು ಎಲ್ಲ ಉದ್ಯೋಗಿಗಳಿಗೆ  ಹಂಚುವುದರ  ಮೂಲಕ  ಅದರ  ಪರಿಚಯ. ಇದು ಮೈಂಡ್ ಟೆಕ್ ಕನ್ನಡ ರಾಜ್ಯೋತ್ಸವದ ವಿಶೇಷ . ಈ  ವರ್ಷ  ಬೆಳಗಾವಿಯ "ಕರದಂಟ್ ಸಿಹಿ " ಹಂಚಿದೆವು .
9. ಕೆಲವರು  ಸಮಾಜ  ಸೇವಕ  ಸಂಘದ  ಕನ್ನಡ  ಪದ್ಯವುಳ್ಳ ಟಿ- ಶರ್ಟ್  ಧರಿಸಿದ್ದರು.

ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.

Tuesday, December 1, 2009

ಸಿಂಫೋನಿ ಸರ್ವಿಸಸ್ ನಲ್ಲಿ ನಡೆದ ಕನ್ನಡ ನಾಡ ಹಬ್ಬ 2009


 
ನಿಮ್ಮ ಸಂಸ್ಥೆಯಲ್ಲೂ ನಾಡ ಹಬ್ಬ ನಡೆದಿತ್ತಾ?, ಅದರ ವರದಿ ಇಲ್ಲಿ ಬರಬೇಕಾ? ಹಾಗಿದ್ರೆ ಅದರ ವರದಿಯನ್ನು, ಕೂಡಲೆ kannadahabba@gmail.com ವಿಳಾಸಕ್ಕೆ ಮಿಂಚಿಸಿ.